ಕೋಟಾಯಂ (ಕೇರಳ), ಜನವರಿ 2 (ಪಿಟಿಐ):
ಇಲ್ಲಿ ಧಾರಾವಾಹಿ ನಟ ಸಿದ್ಧಾರ್ಥ್ ಪ್ರಭು ಚಾಲನೆ ಮಾಡಿದ್ದಾನೆಂದು ಆರೋಪಿಸಲಾದ ಕಾರಿನ ಡಿಕ್ಕಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಲಾಟರಿ ಮಾರಾಟಗಾರನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಮೃತನನ್ನು ತಮಿಳುನಾಡಿನ ಮೂಲದ 60 ವರ್ಷದ ಥಂಕರಾಜ್ ಎಂದು ಗುರುತಿಸಲಾಗಿದೆ.
ಕ್ರಿಸ್ಮಸ್ ಈವ್ ದಿನ ಕೋಟಾಯಂನ ಎಂಸಿ ರಸ್ತೆಯ ನಟ್ಟಾಕೊಂ ಸರ್ಕಾರಿ ಕಾಲೇಜು ಜಂಕ್ಷನ್ ಬಳಿ ಈ ಅಪಘಾತ ಸಂಭವಿಸಿತು. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಥಂಕರಾಜ್ಗೆ ಪ್ರಭು ಚಾಲನೆ ಮಾಡುತ್ತಿದ್ದ ಕಾರು ಡಿಕ್ಕಿ ಹೊಡೆದಿತ್ತು.
ಅವರನ್ನು ತಕ್ಷಣ ಕೋಟಾಯಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗುರುವಾರ ತಡರಾತ್ರಿ ಅವರು ಮೃತಪಟ್ಟರು.
ಅಪಘಾತದ ಸಮಯದಲ್ಲಿ ನಟ ಮದ್ಯದ ಪ್ರಭಾವದಲ್ಲಿದ್ದು, ವಾಹನವನ್ನು ಅತೀವೇಗದಲ್ಲಿ ಚಾಲನೆ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ನಂತರ ಸಿದ್ಧಾರ್ಥ್ ಪ್ರಭು ಸ್ಥಳೀಯ ನಿವಾಸಿಗಳೊಂದಿಗೆ ವಾಗ್ವಾದ ನಡೆಸಿದ್ದು, ಅದು ಬಳಿಕ ಗಲಾಟೆಗೆ ತಿರುಗಿತು.
ಪೊಲೀಸರು ಸ್ಥಳಕ್ಕೆ ಬಂದು ನಟನನ್ನು ವಶಕ್ಕೆ ಪಡೆದು ನಂತರ ಜಾಮೀನಿನಲ್ಲಿ ಬಿಡುಗಡೆ ಮಾಡಿದರು.
ಈ ಸಂಬಂಧ ಪ್ರಕರಣ ದಾಖಲಿಸಿರುವ ಚಿಂಗವನಂ ಪೊಲೀಸ್ ಠಾಣೆ, ಥಂಕರಾಜ್ ಅವರ ಮರಣದ ಹಿನ್ನೆಲೆಯಲ್ಲಿ ಆರೋಪಗಳನ್ನು ಬದಲಾಯಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

