
ನವದೆಹಲಿ, ಜನವರಿ 4 (ಪಿಟಿಐ):
‘ಮುಂದೂಡಿಕೆ ಸಂಸ್ಕೃತಿ’ಯನ್ನು ಖಂಡಿಸಿದ ದೆಹಲಿ ಹೈಕೋರ್ಟ್, ಯೋಚನೆ ಇಲ್ಲದೆ ಮುಂದೂಡಿಕೆಗಳನ್ನು ಕೇಳಲಾಗುತ್ತಿದೆ ಹಾಗೂ ಕೇಳಿದ ಕೂಡಲೇ ಮಂಜೂರು ಆಗುತ್ತದೆ ಎಂಬ ತಪ್ಪು ನಿರೀಕ್ಷೆ ಮೂಡಿದೆ ಎಂದು ಹೇಳಿದೆ.
ವಕೀಲರ ಗೈರುಹಾಜರಿಗಾಗಿ ವಿಧಿಸಲಾದ ₹20,000 ದಂಡವನ್ನು ಮನ್ನಾ ಮಾಡುವ ಅರ್ಜಿಯನ್ನು ನ್ಯಾಯಮೂರ್ತಿ ನೀನಾ ಬನ್ಸಲ್ ಕೃಷ್ಣಾ ವಿಚಾರಣೆ ನಡೆಸಿದರು. ಭವಿಷ್ಯದಲ್ಲಿ ಈ ಪ್ರವೃತ್ತಿ ಬದಲಾಗುತ್ತದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
ಈ ದಂಡವನ್ನು ಕಳೆದ ವರ್ಷದ ಮೇ ತಿಂಗಳಲ್ಲಿ ಹೈಕೋರ್ಟ್ನ ಮತ್ತೊಂದು ಪೀಠ ವಿಧಿಸಿತ್ತು. ಅರ್ಜಿದಾರರ ವಕೀಲರು ಟ್ರಯಲ್ ಕೋರ್ಟ್ನ ಇತರ ಪ್ರಕರಣಗಳಲ್ಲಿ ಬ್ಯಸ್ತರಾಗಿದ್ದರಿಂದ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಅರ್ಜಿದಾರರು ತಿಳಿಸಿದರು.
ಅರ್ಜಿದಾರರು ಅವರ ವಕೀಲರು ಇಬ್ಬರು ಮಕ್ಕಳಿರುವ ಏಕೈಕ ತಾಯಿ ಹಾಗೂ ಜೀವನದಲ್ಲಿ “ಅನೇಕ ಕಷ್ಟಗಳನ್ನು” ಎದುರಿಸುತ್ತಿದ್ದಾರೆ ಎಂದೂ ಹೇಳಿದರು.
ಡಿಸೆಂಬರ್ 10ರ ಆದೇಶದಲ್ಲಿ ನ್ಯಾಯಾಲಯ, “ದುರದೃಷ್ಟವಶಾತ್, ನ್ಯಾಯಾಲಯಗಳಲ್ಲಿ ಕಾಲಕ್ರಮೇಣ ಮುಂದೂಡಿಕೆ ಸಂಸ್ಕೃತಿ ಬೆಳೆಯಿದ್ದು, ಯಾವುದೇ ಪ್ರಕರಣವಾಗಿದ್ದರೂ ಕೇಳಿದ ತಕ್ಷಣ ಮುಂದೂಡಿಕೆ ಸಿಗುತ್ತದೆ ಎಂಬ ತಪ್ಪು ನಿರೀಕ್ಷೆ ಮೂಡಿದೆ” ಎಂದು ಹೇಳಿದೆ.
ವಿರೋಧ ಪಕ್ಷದ ವಕೀಲರ ಸಮಯ ಅಥವಾ ನ್ಯಾಯಾಲಯದ ಸಮಯವನ್ನು ಪರಿಗಣಿಸದೆ ಮುಂದೂಡಿಕೆಗಳನ್ನು ಕೇಳಲಾಗುತ್ತಿದೆ ಎಂದು ಕೋರ್ಟ್ ತಿಳಿಸಿದೆ.
ನ್ಯಾಯಾಲಯ, “ವಕೀಲರು ತಮ್ಮ ಗೈರುಹಾಜರಿಯನ್ನು ವೈಯಕ್ತಿಕ ಸಮಸ್ಯೆ ಎಂದು ಸಮರ್ಥಿಸಲು ಯತ್ನಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಅದು ಮತ್ತೊಂದು ಪ್ರಕರಣದ ವೃತ್ತಿಪರ ಬದ್ಧತೆಯಾಗಿತ್ತು” ಎಂದು ಹೇಳಿದೆ.
ಈ ಪ್ರವೃತ್ತಿ ಶ್ಲಾಘನೀಯವಲ್ಲ ಎಂದು ಹೇಳಿದ ನ್ಯಾಯಾಲಯ, ₹20,000 ದಂಡವನ್ನು ಮನ್ನಾ ಮಾಡಿ ಅರ್ಜಿಯನ್ನು ವಜಾಗೊಳಿಸಿದೆ.
ಪಿಟಿಐ
