ಜಗತ್ತಿನಾದ್ಯಂತ ಬುದ್ಧ ಧಮ್ಮದತ್ತ ಹೆಚ್ಚುತ್ತಿರುವ ಆಸಕ್ತಿ; ಅದರ ಸಂರಕ್ಷಣೆ ಮತ್ತು ಪ್ರಚಾರಕ್ಕೆ ಭಾರತದ ವಿಶೇಷ ಜವಾಬ್ದಾರಿ: ಕಿರಣ್ ರಿಜಿಜು

**EDS: THIRD PARTY IMAGE** In this image posted on Jan. 24, 2026, Union Minister of Minority Affairs Kiren Rijiju during a meeting with a delegation of senior representatives from the Government of South Korea, in New Delhi. (@KirenRijiju/X via PTI Photo)(PTI01_24_2026_000530B)

ನವದೆಹಲಿ, ಜನವರಿ 25 (ಪಿಟಿಐ): ಜಗತ್ತಿನಾದ್ಯಂತ ಜನರು ಹೆಚ್ಚಾಗಿ ಬುದ್ಧ ಧಮ್ಮದತ್ತ ಮುಖ ಮಾಡುತ್ತಿರುವ ಸಂದರ್ಭದಲ್ಲಿ, ಕರುಣೆ, ಅಹಿಂಸೆ, ಸೌಹಾರ್ದತೆ ಮತ್ತು ಸಹಅಸ್ತಿತ್ವದ ತತ್ವಗಳನ್ನು ಸಂರಕ್ಷಿಸುವುದು, ಹಂಚಿಕೊಳ್ಳುವುದು ಹಾಗೂ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಭಾರತದ ವಿಶೇಷ ಜವಾಬ್ದಾರಿಯಾಗಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಶನಿವಾರ ಹೇಳಿದರು.

ಇಲ್ಲಿ ಭಾರತ್ ಮಂಡಪಂನಲ್ಲಿ ಆಯೋಜಿಸಲಾದ ಗ್ಲೋಬಲ್ ಬೌದ್ಧ ಶೃಂಗಸಭೆಯ ಎರಡನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದ ಸಂಸತ್ತಿನ ವ್ಯವಹಾರಗಳು ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಕೇಂದ್ರ ಸಚಿವರಾದ ರಿಜಿಜು, ಬೌದ್ಧ ಧರ್ಮದ ಸಮಾವೇಶಕಾರಿ ಮತ್ತು ಸರ್ವಜನಿಕ ಆಕರ್ಷಣೆಯನ್ನು ಒತ್ತಿ ಹೇಳಿದರು. ಬೌದ್ಧ ಧರ್ಮದ ತತ್ವಗಳು ಕೇವಲ ಬೌದ್ಧರಿಗೆ ಮಾತ್ರವಲ್ಲದೆ ಸಂಪೂರ್ಣ ಮಾನವಕುಲಕ್ಕೂ ಅರ್ಥಪೂರ್ಣವಾಗಿವೆ ಎಂದು ಅವರು ತಿಳಿಸಿದರು.

ವಿವಿಧ ದೇಶಗಳಿಂದ ಆಗಮಿಸಿದ ಖ್ಯಾತ ಭಿಕ್ಷುಗಳು, ಪಂಡಿತರು ಮತ್ತು ಬೌದ್ಧ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಬೌದ್ಧ ಸಂವಾದವನ್ನು ಉತ್ತೇಜಿಸುವಲ್ಲಿ ಭಾರತದ “ಜಾಗತಿಕ ನಾಯಕತ್ವ”ವನ್ನು ಹೈಲೈಟ್ ಮಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಬೌದ್ಧ ಭಿಕ್ಷುಗಳು, ಗುರುಗಳು, ಪಂಡಿತರು ಮತ್ತು ಚಿಂತಕರಿಗಾಗಿ ಅಂತಾರಾಷ್ಟ್ರೀಯ ವೇದಿಕೆಯನ್ನು ಒದಗಿಸುವಲ್ಲಿ ಭಾರತ “ಸಕ್ರಿಯ ಜವಾಬ್ದಾರಿ” ವಹಿಸಿಕೊಂಡಿದೆ ಎಂದು ಅವರು ಹೇಳಿದರು. ಇದು ಶಾಂತಿ ಮತ್ತು ಸೌಹಾರ್ದತೆಯ ಮೇಲಿನ ಭಾರತದ ಶಾಶ್ವತ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಶೇಖಾವತ್ ಹೇಳಿದರು.

ಸಂಸ್ಕೃತಿ ಸಚಿವಾಲಯದ ಪ್ರಕಟಣೆಯ ಪ್ರಕಾರ, ಜನವರಿ 24 ರಿಂದ 25 ರವರೆಗೆ ನಡೆಯುತ್ತಿರುವ ಈ ಶೃಂಗಸಭೆ, ಬುದ್ಧನ ಭೂಮಿಯಾಗಿ ಭಾರತದ ಪಾತ್ರವನ್ನು ಹಾಗೂ ಸಮೂಹ ಜ್ಞಾನ, ಶಾಂತಿಪೂರ್ಣ ಸಹಅಸ್ತಿತ್ವ ಮತ್ತು ಪರಸ್ಪರ ಅರ್ಥೈಸಿಕೊಳ್ಲುವಿಕೆಯ “ಜಾಗತಿಕ ದೀಪಸ್ತಂಭ”ವಾಗಿ ದೇಶದ ಸ್ಥಾನವನ್ನು ಪುನಃ ದೃಢಪಡಿಸುತ್ತದೆ.

ಜಾಗತಿಕವಾಗಿ ಜನರು ಧಮ್ಮದತ್ತ ಹೆಚ್ಚು ಆಕರ್ಷಿತರಾಗುತ್ತಿರುವ ಹಿನ್ನೆಲೆಯಲ್ಲಿ, ಕರುಣೆ, ಅಹಿಂಸೆ, ಸೌಹಾರ್ದತೆ ಮತ್ತು ಸಹಅಸ್ತಿತ್ವದ ತತ್ವಗಳನ್ನು ಸಂರಕ್ಷಿಸಿ ಅವನ್ನು ಜೀವನದಲ್ಲಿ ಅನುಸರಿಸುವ ವಿಶೇಷ ಜವಾಬ್ದಾರಿ ಭಾರತಕ್ಕಿದೆ ಎಂದು ರಿಜಿಜು ಪುನರುಚ್ಚರಿಸಿದರು.

ಈ ಶೃಂಗಸಭೆಯ ವಿಷಯ — ‘ಸಮೂಹ ಜ್ಞಾನ, ಏಕೀಕೃತ ಧ್ವನಿ ಮತ್ತು ಪರಸ್ಪರ ಸಹಅಸ್ತಿತ್ವ’.

‘ಜ್ಞಾನ ಭಾರತಂ’ ಮಿಷನ್ ಅಡಿಯಲ್ಲಿ, ಪ್ರಾಚೀನ ಹಸ್ತಪ್ರತಿಗಳ ಡಿಜಿಟಲೀಕರಣಕ್ಕಾಗಿ ಭಾರತ ಸರ್ಕಾರವು ಜಗತ್ತಿನಲ್ಲೇ ಅತಿ ದೊಡ್ಡ ಯೋಜನೆಗಳಲ್ಲಿ ಒಂದನ್ನು ಕೈಗೊಂಡಿದೆ ಎಂದು ಶೇಖಾವತ್ ತಿಳಿಸಿದರು.

ಈ ಮಹತ್ವಾಕಾಂಕ್ಷಿ ಪ್ರಯತ್ನವು ಭಾರತದ ವಿಶಾಲ ನಾಗರಿಕತೆಗೂ ಆಧ್ಯಾತ್ಮಿಕ ಜ್ಞಾನಕ್ಕೂ ಸಂರಕ್ಷಣೆ ನೀಡುವುದರ ಜೊತೆಗೆ, ಅದನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

ದಕ್ಷಿಣ ದೆಹಲಿಯ ರಾಯ್ ಪಿಥೋರಾ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆಯುತ್ತಿರುವ “ದಿ ಲೈಟ್ ಅಂಡ್ ದಿ ಲೋಟಸ್: ರೆಲಿಕ್ಸ್ ಆಫ್ ದಿ ಅವೇಕನ್‌ಡ್ ವನ್” ಎಂಬ ಭವ್ಯ ಅಂತಾರಾಷ್ಟ್ರೀಯ ಪ್ರದರ್ಶನವನ್ನು ವೀಕ್ಷಿಸಿ, ಭಗವಾನ್ ಬುದ್ಧನಿಗೆ ಶ್ರದ್ಧಾಂಜಲಿ ಅರ್ಪಿಸುವಂತೆ ಶೇಖಾವತ್ ಪ್ರತಿನಿಧಿಗಳು ಮತ್ತು ನಾಗರಿಕರನ್ನು ಆಹ್ವಾನಿಸಿದರು.

ಈ ಪ್ರದರ್ಶನದಲ್ಲಿ 19ನೇ ಶತಮಾನದ ಕೊನೆಯಲ್ಲಿ ಅನ್ವೇಷಿಸಲಾದ ಬುದ್ಧನೊಂದಿಗೆ ಸಂಬಂಧಿಸಿದ ಐತಿಹಾಸಿಕ ಪಿಪ್ರಹ್ವ ಅವಶೇಷಗಳನ್ನು ಪ್ರದರ್ಶಿಸಲಾಗಿದ್ದು, ಇತ್ತೀಚೆಗೆ ಮರಳಿ ತರಲಾದ ಪಿಪ್ರಹ್ವ ರತ್ನಗಳನ್ನೂ ಒಳಗೊಂಡಿದೆ.

ಪಿಪ್ರಹ್ವ ಅವಶೇಷಗಳು ಭಾರತದ ಪ್ರಾಚೀನ ನಾಗರಿಕತೆ ಮತ್ತು ಶಾಶ್ವತ ಆಧ್ಯಾತ್ಮಿಕ ಪರಂಪರೆಯ ಜೀವಂತ ಸಂಕೇತಗಳಾಗಿವೆ ಎಂದು ಅವರು ವರ್ಣಿಸಿದರು.

ಈ ಎರಡು ದಿನಗಳ ಶೃಂಗಸಭೆಯನ್ನು ಅಂತಾರಾಷ್ಟ್ರೀಯ ಬೌದ್ಧ ಮಹಾಸಂಘ (IBC) ಮತ್ತು ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ಆಯೋಜಿಸಲಾಗಿದೆ.